Monday, March 1, 2010

ನಾಳೆ ಅಂದವನ ಮನೆ ಹಾಳು...

ನಮ್ಮ ಮನೆ ಬೆಕ್ಕು ಮೊನ್ನೆ ಮೊನ್ನೆ ತಾನೆ ೪ ಮುದ್ದಾದ ಮರಿಗಳನ್ನು ಹೆತ್ತು ತಾಯ್ತನದ ಸಂಭ್ರಮವನ್ನು ಅನುಭವಿಸುತ್ತಿತ್ತು. ಬೆಕ್ಕಿನ ಮರಿಗಳು ಅಡಿಗೆಮನೆಯ ಅಟ್ಟದ ಮೇಲೆ ಒಂದು ರಟ್ಟಿನ ಡಬ್ಬದಲ್ಲಿ ಆರಾಮವಾಗಿದ್ದವು. ಅದರ ನೇರಕ್ಕೆ exhaust fan ಇತ್ತ್ತು. ಆ exhaust fan ಕಿಂಡಿಯಲ್ಲಿ ಕುಳಿತು ಇನ್ನೊಂದು ಬೆಕ್ಕ್ಕುಆ ಬೆಕ್ಕಿನ ಮರಿಗಳನ್ನು ಕೊಲ್ಲಲು/ತಿನ್ನಲು ಹೊಂಚು ಹಾಕಿದ್ದುದು ನನ್ನಮ್ಮನ ಗಮನಕ್ಕೆ ಬಂದಿತ್ತು. ನಾನು ಎಂದಿನಂತೆ ಕಳೆದ ವಾರಾಂತ್ಯದಲ್ಲಿ ಮನೆಗೆ ಹೋದಾಗ ಬೆಕ್ಕಿನಮರಿಗಳನ್ನು ನೋಡಿ ಪುಳಕಗೊಂಡಿದ್ದೆ. ಬೇರೆ ಬೆಕ್ಕೊಂದರಿಂದ ತೊಂದರೆಯಿದೆ ಎಂದು ಗೊತ್ತಾದ ಮೇಲೆ ಬೆಳಿಗ್ಗೆ ಹೇಗಾದರು ಮಾಡಿ ಆ exhaust fan ಕಿಂಡಿಯನ್ನು ಮುಚ್ಚಿಹಾಕಲು ಯೋಜಿಸಿದ್ದೆ. ಆ ಘಳಿಗೆಯಲ್ಲಿ "ನಾಳೆ ಅಂದವನ ಮನೆ ಹಾಳು" ಅನ್ನೋ ಮಾತನ್ನು ಮರೆತಿದ್ದೆ. ನಾಳೆ ಅಂದಿದ್ದೇ ಬೆಕ್ಕಿನಮರಿಗಳಿಗೆ ಮುಳುವಾಯಿತು ನೋಡಿ.

ಶನಿವಾರ ರಾತ್ರಿ ಸುಮಾರು ೧.೩೦ರ ಹೊತ್ತಿನಲ್ಲಿ ನನ್ನಮ್ಮ ಎದ್ದು ಕಿರುಚುವುದು ಕೇಳಿಸಿದಾಗಲೇ ಏನೋ ಎಡವಟ್ಟಾಗಿದೆ ಎಂದು ನನ್ನ ಅರಿವಿಗೆ ಬಂತು. ಆದದ್ದಿಷ್ಟೆ-ಆ ಕಳ್ಳಬೆಕ್ಕು ಅಡಿಗೆಮನೆಯ exhaust fan ನ ರೆಕ್ಕೆಯೊಂದನ್ನು ಮುರಿದು ಒಳನುಗ್ಗಿದ್ದೇ, ನೇರವಾಗಿ ಬೆಕ್ಕಿನ ಮರಿಗಳನ್ನು ಕಚ್ಚಲು ಶುರು ಮಾಡಿದೆ. ಅಮ್ಮಬೆಕ್ಕು ಗಾಬರಿಯಲ್ಲಿ ಸ್ವಲ್ಪ ಕಿರುಚಾಡಿ, ಜಗಳವಾಡಿ ಪ್ರತಿರೋಧ ತೋರಿದೆ. ಇಷ್ಟು ಆಗುವಷ್ಟ್ರರಲ್ಲಿ ನನ್ನ ಎಂಟ್ರಿ. ಕೈಗೆ ಸಿಕ್ಕಿದ ಪೊರಕೆಯೊಂದರ ಹಿಡಿಯಿಂದ ಸಾಕುಬೇಕೆನ್ನುವಷ್ಟು ಏಟುಗಳು ಬಿದ್ದವು. ಆದರು ಆ ಬೆಕ್ಕು ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಅಲ್ಲೇ ಟಳಾಯಿಸತೊಡಗಿತು. ಇನ್ನು ಅದನ್ನು ತಡೆಯಲಸಾಧ್ಯ ಎನಿಸಿದಾಗ ನೇರ ಅದರ ಕತ್ತಿಗೆ ಕೈ ಹಾಕಿ ಹಿಡಿದೆ ನೋಡಿ, ಅದರ ರೋಷ ತಾಪಕ್ಕೆ ನನ್ನ ಬೆರಳು ಅಂಗೈಗಳು ತುತ್ತಾಯಿತು. ಕೊನೆಗೂ ಅಮ್ಮ ಅಡಿಗೆಮನೆ ಕಿಟಕಿ ತೆಗೆದ ಮೇಲೆ ಆ ಕೊಲೆಪಾತಕ ಬೆಕ್ಕು ಓಡಿಹೋಯಿತು. ಅಷ್ಟ್ರರಲ್ಲಾಗಲೇ ಒಂದು ಮುದ್ದಾದ ಮರಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಆ ಕ್ಷಣಕ್ಕೆ ನಮ್ಮ ಮನೆಯ ಮುದ್ದಿನ ಬೆಕ್ಕು ಹಲವು ದಿನಗಳಿಂದ ಮರಿಗಳನ್ನು ಹೊತ್ತು ಪಡುತ್ತಿದ್ದ ಕಷ್ಟ ಕಣ್ಮುಂದೆ ಹಾದುಹೋಯ್ತು.. ರಾತ್ರಿಯ ಗಲಾಟೆಯಲ್ಲಿ ಒಂದು ಮರಿ ಸತ್ತಿದ್ದನ್ನು ಗಮನಿಸದ ಬೆಕ್ಕಮ್ಮ, ಮರುದಿನ ಬೆಳಿಗ್ಗೆ ಒಂದು ಬೆಕ್ಕಿನ ಮರಿ ಇಲ್ಲ ಎಂಬುದು ಬೆಕ್ಕಮ್ಮನ ಗಮನಕ್ಕೆ ಬಂದಮೇಲಂತು ಅದರ ರೋಧನ ಮನೆಯವರೆಲ್ಲರನ್ನು ಮಮ್ಮಲಮರುಗುವಂತೆ ಮಾಡಿತು. ಈ ಕಾಲದಲ್ಲಿ ಮನುಷ್ಯನಿಗೇ ಇಲ್ಲದಷ್ಟು ಅಂತಃಕರಣ ಆ ಮೂಕಪ್ರಾಣಿಗೆ ಇದ್ದಿದ್ದು ನೋಡಿ ನನಗಂತು ನನ್ನ ಮೇಲೆ ಹೇಸಿಗೆಯಾಗುವಂತೆ ಮಾಡಿದೆ..

ಆದರೆ ನನಗೆ ಮತ್ತೆ ಇಂದು ಬೆಳಿಗ್ಗೆ ಆಘಾತವಾದದ್ದು ಇನ್ನು ಒಂದು ಬೆಕ್ಕಿನಮರಿ ಚಿರನಿದ್ರೆಗೆ ತೆರಳಿದಾಗ. ಅಂತೂ ನನ್ನ ಹೊಣೆಗೇಡಿತನದಿಂದಾಗಿ, ಎರಡು ಮುದ್ದಾದ ಬೆಕ್ಕಿನಮರಿಗಳು ಜೀವಕಳೆದುಕೊಂಡವು. ಮತ್ತೆಂದೂ ನಾಳೆ ಅನ್ನದೇ ಆಗಿನ ಕೆಲಸ ಆಗಲೇ ಮುಗಿಸಬೇಕೆಂಬ ಪಣ ತೊಟ್ಟಿದ್ದೇನೆ... ಇನ್ನಾದರು ನನಗೆ ಎಲ್ಲದಕ್ಕು "ನಾಳೆ" ಅನ್ನದೇ ಇರುವ ಹಾಗೆ ಬುದ್ದಿ ಕೊಡು ಭಗವಂತ ಎಂದು ಬೇಡುತ್ತ, ನನ್ನಲ್ಲಿ ಪಾಪಪ್ರಜ್ನೆಯನ್ನು ಹುಟ್ಟುಹಾಕಿರುವ ಆ ಬೆಕ್ಕಿನ ಮರಿಗಳ ಆತ್ಮಕ್ಕೆ ಶಾಂತಿ ಕೋರುತ್ತಿದ್ದೇನೆ..

4 comments: